Tuesday, February 3, 2009

**** ಸೊಬಗಿನ ಜಾನಪದ ಜಾತ್ರೆಗಳು....


ಹಳ್ಳಿ ಜಾತ್ರೆಗಳಲ್ಲೊಂದು ಸುತ್ತು....


ನಾನು ಚಿಕ್ಕಂದಿನಲ್ಲಿ ನೋಡಿದ ಜಾತ್ರೆಗಳೆಂದರೆ ಕೊಂಗಳ್ಳಿ ಜಾತ್ರೆ,ಗುಡುಗಳಲೆ ಜಾತ್ರೆ,ಟೆಂಪಲ್ ಜಾತ್ರೆ...ಇತ್ಯಾದಿ. ಊರುಗಳು ಮಲೆನಾಡಿನ ಮಡಿಲಲ್ಲಿವೆ.ಮಲೆನಾಡಿನ ಸಕಲೇಶಪುರ ತಾಲೋಕಿನ ಕೊಂಗಳ್ಳಿ,ಕೊಡಗು ಜಿಲ್ಲೆಯ ಶನಿವಾರಸಂತೆಯ ಸಮೀಪದ ಗುಡುಗಳಲೆ ಜಾತ್ರೆಗಳು ನಮ್ಮ ಪ್ರದೇಶದಲ್ಲಿ ದೊಡ್ಡ ಜಾತ್ರೆಗಳು.
ಸಾಮಾನ್ಯವಾಗಿ ಮಲೆನಾಡಿನ ಜಾತ್ರೆಗಳಲ್ಲಿ ಉತ್ಸವ,ಸುಗ್ಗಿಗಳಿಗೆ ಪ್ರಾಧಾನ್ಯ.ನಾನು ನೋಡಿದ ಕೊಂಗಳ್ಳಿ ಜಾತ್ರೆಯಲ್ಲಿ ಕಾಡಿನ ನಡುವಿರುವ ದೇಗುಲದಲ್ಲಿ ಪೂಜೆ ಸಲ್ಲಿಸಿ,ಅಥವಾ ಹರಕೆ ತೀರಿಸಿ ದೇಗುಲದ ಸಮೀಪದಲ್ಲಿನ ಡೇರೆಗಳಲ್ಲಿ ಸಿಗುತ್ತಿದ್ದ ಪೀಪಿ,ಬಲೂನು,ಸಿಹಿತಿಂಡಿಗಳು,ಬತ್ತಾಸು,ಪುರಿ,ಕಾರಾಸೇವಿಗೆ,ಬಟ್ಟೆ,ಚಪ್ಪಲಿಗಳನ್ನು ಜಾತ್ರೆಗೆ ಬಂದ ಜನ ಕೊಳ್ಳುತ್ತಿದ್ದರು.ಕಾಡಿನ ನಡುವೆ ನಿರ್ಜನ ದೇಗುಲದೆದುರು ವರ್ಷದಲ್ಲೊಮ್ಮೆ ಸುಮಾರು ಒಂದು ಸಾವಿರ ಜನ ಒಟ್ಟಿಗೆ ಸೇರಿ ಜಾತ್ರೆಯಾಗುತ್ತಿತ್ತು.ಮಲೆನಾಡಿನ ಜಾತ್ರೆ ಬಯಲುಸೀಮೆಯ ವಾರದ ಸಂತೆಗೆ ಸಮವೆನಿಸುತ್ತಿತ್ತು ಎಂದರೆ ತಪ್ಪಾಗಲಾರದು.ಇನ್ನು ಗುಡುಗಳಲೆ ಜಾತ್ರೆ ಒಂದುವಾರಗಳ ಕಾಲ ನಡೆದು ಆಕರ್ಷಕವೆನಿಸುತ್ತಿತ್ತು. ವೇಳೆಯಲ್ಲಿ ಸರ್ಕಸ್,ನಾಟಕಗಳು,ಸಂಚಾರಿ ಸಿನಿಮಾಗಳ ಪ್ರದರ್ಶನವಿರುತ್ತಿತ್ತು.ರಾಟಾಳೆ,ತೊಟ್ಟಿಲುಗಳು ಮಕ್ಕಳಿಗೆ ಪ್ರಿಯವಾಗಿತ್ತು.ಇತ್ತೀಚೆಗೆ ಇವು ತಮ್ಮ ಹಿಂದಿನ ಸೊಗಡನ್ನು ಕಳೆದುಕೊಂಡಿವೆ.
ಇಂದಿನ ದಿನಗಳಲ್ಲಿ ಜಾತ್ರೆಗಳು ನಮ್ಮ ಜನಪದರಿಂದ ದೂರಾಯಿತೇನೋ ಎಂಬ ಭಾವನೆ ನನ್ನದಾಗಿತ್ತು.ಆದರೆ ಬಯಲು ಸೀಮೆಯ ಕೆಲವು ಹಳ್ಳಿ,ಪಟ್ಟಣಗಳಲಿ ಜಾತ್ರೆಯ ಸೊಗಡು ಇನ್ನೂ ಮಾಸಿಲ್ಲ.ಹಿಂದಿನ ವೈಭವ ಈಗಿಲ್ಲವಾದರೂ ತಕ್ಕ ಮಟ್ಟಿಗೆಜಾನಪದ ಜಾತ್ರೆಗಳುಎನಿಸಿಕೊಳ್ಳುತ್ತವೆ.
ನಿನ್ನೆ ರಥಸಪ್ತಮಿಯ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ರಥೋತ್ಸವವಿತ್ತು.ಇಂದು ಅಲ್ಲಿ ಜಾತ್ರೆಯೂ ಸಹ.

ಇಲ್ಲಿನ
ಜಾತ್ರೆ ನೋಡಿದಾಗ ಮನಸ್ಸಿಗೆ ನೆಮ್ಮದಿಯಾಯಿತು.ಕಾರಣ ನಮ್ಮ ಜನಪದರ ಆಟಗಳು,ಆಚರಣೆಗಳು,ತಿಂಡಿತಿನಿಸುಗಳು,ಜಾತ್ರೆ ವಾತಾವರಣ ಇನ್ನೂ ಹಾಗೆ ಉಳಿದಿದೆಯಲ್ಲಾ ಎಂದು ಸಂತಸವಾಯಿತು.
ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲದ ಹಾದಿಯ ಇಕ್ಕೆಲದಲ್ಲಿ ಮತ್ತು ಪಕ್ಕದ ವಿಶಾಲ ಅಂಗಳಲ್ಲಿ ಭರ್ಜರಿಯಾಗಿ ಜಾತ್ರೆ ನಡೆಯುತ್ತಿತ್ತು.ಗತಕಾಲದ ನೆನಪಿಗೆ ಸಾಕ್ಷಿಯಂತಿದ್ದ ಜಾತ್ರೆಯಲ್ಲಿ ಒಂದು ಸುತ್ತುಬಂದು ಇಲ್ಲಿನ ವಿಶೇಷತೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ.ಮಾಸಿದ ನೆನಪಿಗೆ ಹೊಳಪು ನೀಡಿದೆ.
ಪಿಂಗಾಣಿಯ ಭರಣಿ,ಕುಡಿಕೆ,ಜಾಡಿ,ಮಡಿಕೆ-ಕುಡಿಕೆಗಳು,ಟೇಫು-ರಿಬ್ಬನ್ನುಗಳು,ಮಹಿಳೆಯರ ಅಲಂಕಾರಿಕ ವಸ್ತುಗಳು,ಮಕ್ಕಳ ಆಟದ ಸಾಮಾನುಗಳು,ಕಲ್ಲಂಗಡಿ,ಕಬ್ಬು,ಸೊಪ್ಪಿನ ಕಡಲೆ,ಬಣ್ಣಬಣ್ಣದ ಮಿಠಾಯಿಗಳು,ಬೆಂಡುಬತ್ತಾಸುಗಳು,ಹಾವಾಡಿಗರು,ಗಿಣಿಶಾಸ್ತ್ರದವರು,
ಕೋಲೆಬಸವರು
,ವಿಧವಿಧವಾದ ಹಳ್ಳಿ ಗ್ಯಾಂಬ್ಲಿಂಗ್ ಕ್ರೀಡೆಯಲ್ಲಿ ಮುಳುಗಿಹೋಗಿದ್ದ ಹಳ್ಳಿಗರು,ಮಕ್ಕಳು.....ಹೀಗೆ ಗ್ರಾಮ್ಯ ಪ್ರದೇಶದವರಿಗೆ ಇಷ್ಟವಾಗುವ ಪಟ್ಟಣಿಗರಿಂದಲೋಕಲ್ಎಂದೆನಿಸಿಕೊಳ್ಳುವ ಜಾತ್ರೆಯ ಸವಿಯನ್ನು ವ್ಯಕ್ತಿಯಂತೆಯೇ ನಾನೂ ನನ್ನ ಮಗಳನ್ನು ಭುಜದ ಮೇಲೆ ಕೋರಿಸಿಕೊಂಡು ಸುತ್ತಿ ಸವಿದೆ.
ಆದರೆ ನನ್ನ ಮಗಳಿಗೆ ಎಷ್ಟು ಹೇಳಿದರೂ ಅವಳು ಇದನ್ನು ಜಾತ್ರೆ ಎನ್ನುತ್ತಿಲ್ಲ.......ಎಗ್ಜಿಬಿಸನ್...ಎಂದು ಮುದ್ದುಮುದ್ದಾಗಿ ಉಲಿಯುತ್ತಾಳೆ....

ಜಾತ್ರೆ ಚಿತ್ರಗಳು.
ಜನ ಮರುಳೋ....ಜಾತ್ರೆ ಮರುಳೋ......











ಬಳೆ ಎಸೆದು....ಬಲೆ ಹಾಕು...!

ಮಿಠಾಯಿ
ಅಂಗಡಿ.......















Thursday, January 15, 2009

ಮನೆಮುಂದಿನ ಹದ್ದು-ಹುಲಿಯೂರಿನ ಸರ‘ಹದ್ದು"!!!

ಹದ್ದು ಹಾರುತಿದೆ ನೋಡಿದಿರಾ.......?
ಒಂದು ಮಧ್ಯಾನ್ಹ ನೆತ್ತಿ ಸುಡುವ ರಣಬಿಸಿಲಿನಲ್ಲಿ ಮನೆ ಸೇರುವ ವೇಳೆಗೆ ಮೋಡಗಳು ಮುಗಿಲೇರತೊಡಗಿದ್ದವು.
ಹಿಂಜಿದ
ಅರಳೆಯಂತಹ ಮೋಡಗಳ ನಡುವೆಯೇ
ಬಿಸಿಲಿನ
ಝಳ ಜೋರಾಗಿತ್ತು.
ಗೇಟು
ದಾಟಿ ಮನೆ ಅಂಗಳಕ್ಕೆ ಕಾಲಿಟ್ಟಾಗ
ಸಣ್ಣ
ನೆರಳೊಂದು ಸೊಯ್ಯನೆ ಅಂಗಳ ದಾಟಿ ಮನೆಯ
ಗೋಡೆ ಹತ್ತಿ ಮರೆಯಾಯಿತು.ಕತ್ತೆತ್ತಿ ನೋಡಿದೆ.ವಿಶಾಲ ಆಗಸದಲ್ಲಿ ಅರೆಬರೆ ಕವಿದ ಮೋಡಗಳ ನಡುವೆ ಮೂರ್ನಾಲ್ಕು ಹದ್ದುಗಳು ಗಿರಕಿ ಹೊಡೆಯುತ್ತಿದ್ದವು.ಹೀಗೆ ಸುತ್ತುತ್ತಿದ್ದ ಗಿಡುಗವೊಂದು ಕೆಳಗಿಳಿಯ ತೊಡಗಿ ನನ್ನ ಇರುವಿಕೆಯಿಂದ ಮತ್ತೆ ಮೇಲೇರಿದ್ದರ ಪರಿಣಾಮ ನೆರಳು ನನ್ನ ಮುಂದೆ ಸೊಯ್ಯನೆ ಸಾಗಿತ್ತು. ಆದರೆ ವಾಸ್ತವವೇ ಬೇರೆಯಾಗಿತ್ತು.ಹದ್ದು ನನಗೆ ಹೆದರಿ ಮೇಲೆ ಹಾರಲಿಲ್ಲ.ಪಕ್ಕದ ಸೈಟಿನಲ್ಲಿದ್ದ ಹುತ್ತದ ಒಳಗಿನಿಂದ ಮಳೆಹುಳುಗಳು ಹೊರಬಂದು ಹಾರುತ್ತಿದ್ದವು.ಮೇಲೆ
ಸುತ್ತುತ್ತಿದ್ದ ಹದ್ದುಗಳು ಮಳೆಹುಳುಗಳು ಹಾರಿದ್ದೇ ತಡ ಗಾಳಿಯಲ್ಲಿ ತೇಲಿಬಂದು
ಮಳೆಹುಳುಗಳನ್ನು ಹಿಡಿದು ರಾಕೇಟ್ನಂತೆ ಮೇಲೇರುತ್ತಿದ್ದವು.ಹದ್ದುಗಳು ಮಳೆಹುಳುಗಳ ಗುಳಂ ಮಾಡುವ ಪರಿಯನ್ನು ನೋಡುತ್ತಿದ್ದ ನನಗೆ
ತೇಜಸ್ವಿಯವರ "ಹುಲಿಯೂರಿನ ಸರಹದ್ದು" ಕಥೆ ನೆನಪಾಯಿತು.
ಕಥೆಗೂ ವಾಸ್ತವಕ್ಕೂ ಇದ್ದ ವ್ಯತ್ಯಾಸ ಇಷ್ಟೆ.ಇಲ್ಲಿ ಹದ್ದು ಮಳೆಹುಳ ಭಕ್ಷಣೆಗೆ
ಆಗಸದಲ್ಲಿ ಸುತ್ತುತ್ತಿದೆ.ಹುಲಿಯೂರಿನ ಸರಹದ್ದಿನಲ್ಲಿ ಮಳೆಹುಳುಗಳನ್ನು ಹಿಡಿಯುವುದರಲ್ಲಿ ಮಗ್ನವಾದ ಕೋಳಿಪಿಳ್ಳೆಗಳನ್ನು ಹಿಡಿಯಲು ಗರುಡ ಹೊಂಚು ಹಾಕುತ್ತಿತ್ತು.ಇಲ್ಲಿ ನಡೆಯುತ್ತಿದ್ದ ಮಳೆಹುಳುಗಳ ಬೇಟೆ,ಇಲ್ಲಿನ ವಾತಾವರಣ ತೇಜಸ್ವಿಯವರ ಕಥನದ ರೂಪಕದಂತಿತ್ತು.ಇಲ್ಲಿನ ಸನ್ನಿವೇಶವನ್ನು ಗಮನಿಸಿದಾಗ ತೇಜಸ್ವಿಯವರು ನಿಸರ್ಗದ ಸಣ್ಣ ಸಣ್ಣ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಷ್ಟು ಚೆನ್ನಾಗಿ ಅನುಭವಿಸಿ ಬರೆದಿದ್ದಾರೆ ಎಂದೆನಿಸಿತು. ತೇಜಸ್ವಿಯವರ ಹುಲಿಯೂರಿನ ಸರಹದ್ದಿನಲ್ಲಿ ಬರುವ ಘಟನೆಗಳಿಗೂ ನಮ್ಮ ಮನೆಯ
ಮುಂದಿನ ನಿಸರ್ಗದ ವ್ಯಾಪಾರಕ್ಕೂ ಬಹಳಷ್ಟು
ಸಾಮ್ಯತೆಯಿತ್ತು
.
ಆದಕಾರಣ
ತೇಜಸ್ವಿಯವರ
ಭಾಷೆಯನ್ನು ಅಲ್ಲಲ್ಲಿ ಬಳಸಿ ನಮ್ಮ
ಮನೆಯಂಗಳದ
ಕಥೆಯನ್ನು ಹೇಳುತ್ತೇನೆ ಕೇಳಿ.
ವರ್ತುಳ,ವರ್ತುಳ,ವರ್ತುಳವಾಗಿ ಹದ್ದುಗಳ
ನೆರಳು
ಧಡೀರನೆ ಮನೆಯ ಮುಂದೆಲ್ಲಾ ಬಿದ್ದು,
ಧಿಗ್ಗನೆ ಮನೆಯ ಗೋಡೆಯೇರಿ,ಆಗಸದಿಂದ ಜುಣುಗಿ
ಇಳಿದ
ಅರೆಬರೆ ಬಿಸಿಲಿನಲ್ಲೇ ತನ್ನ ಮೇರೆಯನ್ನು ನಿರ್ದೇಶಿಸುತ್ತಿತ್ತು.ಮೇಲೆ,ಬಹುಮೇಲೆ ಒಂದೆರಡು ಗರುಡಗಳು ಹಾಯಾಗಿ ರೆಕ್ಕೆಯನ್ನು ಬಿಚ್ಚಿಕೊಂಡು ಸುತ್ತೀ ಸುತ್ತೀ ಸುತ್ತೀ ತೇಲುತ್ತಿತ್ತು.ಮಳೆಹುಳುಗಳು ಸುಮಾರು ಹದಿನೈದು ಅಡಿ
ಎತ್ತರದಲ್ಲಿ ಹಾರುವುದೇ ತಡ ಎಲ್ಲಿಂದಲೋ ಒಂದು ಹದ್ದು ಹಾರಿಬಂದು ಅಂತರಿಕ್ಷದಲ್ಲೇ ಫಳಾರ ಮಾಡುತ್ತಿತ್ತು.
ಕತ್ತಲು ತುಂಬಿದ್ದ ಶೂನ್ಯಬಿಲದ ಬಾಯೊಳಗಿನಿಂದ ಒಮ್ಮೆಲೆ ನಾಲ್ಕೈದು ಹುಳಗಳು
ಹೊರಹಾರಿದಂತೆ ಮೂರ್ನಾಲ್ಕು ಗಿಡುಗಗಳೂ ಆಗಸದಿಂದ ತೇಲಿಬಂದು ಹುಳಗಳನ್ನು ಹಿಡಿದು
ತಿನ್ನುವ ಭರಾಟೆಯಲ್ಲಿ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತವೇನೋ ಎಂದುಕೊಳ್ಳುವಷ್ಟರಲ್ಲಿ ದಿಕ್ಕು ಬದಲಿಸಿ ಗಾಳಿಯಲ್ಲಿ ಮೇಲೇರುತ್ತಿದ್ದವು.ಮಂದಗತಿಯಲ್ಲಿ ಹಾರುವ ಮಳೆಹುಳುಗಳನ್ನು ಹದ್ದುಗಳು ತಮ್ಮ
ಕೊಕ್ಕೆಯಂತಹ ಕಾಲುಗುರುಗಳ ನಡುವೆ ಅಮುಕಿ ಹಿಡಿದು ಹಾರುತ್ತಲೇ ಅಂತರಿಕ್ಷದಲ್ಲೇ ಗುಳಂ ಮಾಡುತ್ತಿದ್ದವು. ದುರಂತದ ಪ್ರತೀಕದಂತೆ ಮಳೆಹುಳುಗಳ ರೆಕ್ಕೆಗಳು ಮೆಲುಗಾಳಿಯಲ್ಲಿ ನವುರಾಗಿ ನರ್ತಿಸುತ್ತಾ,ಬಿಸಿಲಿಗೆ ಹೊಳೆಯುತ್ತಾ ನಿಧಾನವಾಗಿ ಭೂಸ್ಪರ್ಶಿಸುತ್ತಿದ್ದವು. ಅತ್ತ ವಿದ್ಯುತ್ ತಂತಿಯ ಮೇಲೆ ಮೈನಾಹಕ್ಕಿಗಳು,ಕಾಗೆಗಳು ಹದ್ದುಗಳ ಹಾರಾಟಕ್ಕೆ ಹೆದರಿ ಕುಳಿತು ಮಳೆಹುಳು ಮತ್ತು ಗೆದ್ದಲು ಹುಳುಗಳು ಬುಳುಬುಳು ಹೊರನುಗ್ಗುತ್ತಿದ್ದ ತೂತೊಂದರ ಕಡೆಗೇ ಆಸೆಗಣ್ಣಿನಿಂದ ನೋಡುತ್ತಿದ್ದವು.ಹದ್ದುಗಳು ಎತ್ತರದಲ್ಲಿ ತೇಲುತ್ತಿದ್ದಾಗ ತಗ್ಗಿನಲ್ಲಿ ಹಾರುವ ಮಳೆಹುಳುಗಳನ್ನು ಸ್ವಾಹಾ ಮಾಡಲು
ಹಕ್ಕಿಗಳಲ್ಲಿ ಪೈಪೋಟಿ ನಡೆಯುತ್ತಿತ್ತು.ತಮ್ಮ ಆಹಾರ ಇತರರ ಪಾಲಾದಿತೆಂದು ಒಂದನ್ನೊಂದು ಹೆದರಿಸಿ ಓಡಿಸುವ ಕಾರ್ಯದಲ್ಲಿ ಹಕ್ಕಿಗಳು ಮಗ್ನವಾಗಿದ್ದವು.
ನಮ್ಮ ಮನೆಯ ಮೇಲೆ ಹಾರುತ್ತಿದ್ದ ಹದ್ದುಗಳಿಗೆ ಮಳೆಹುಳುಗಳ ಭೋಜನ ಬೇಜಾರಾಯಿತೋ ಅಥವಾ
ಇನ್ನೇಲ್ಲಾದರೂ ಭೂರಿಭೋಜನದ ಸುಳಿವು ಸಿಕ್ಕಿತೋ ಅಂತೂ ನಮ್ಮ ಮನೆಯ ಮೇಲಿಂದ ಮರೆಯಾದವು.ಬಳಿಕ ಕಾಗೆ,ಮೈನಾ,ಮಿಂಚುಳ್ಳಿಗಳು ಮಳೆಹುಳುಗಳ ಶಿಖಾರಿಯಲ್ಲಿ ಮಗ್ನರಾದವು.ನಿಸರ್ಗದ ಆಹಾರ ಚಕ್ರದಲ್ಲಿ ಕೊಂಚ ತಡವಾದರೂ ಸಣ್ಣ ಹಕ್ಕಿಗಳಿಗೆ ಅವುಗಳ ಪಾಲು ಸಿಕ್ಕಿತ್ತು.
*** ಅಶೋಕ ಉಚ್ಚಂಗಿ ***

Tuesday, January 13, 2009

ಸಂಕ್ರಾಂತಿಯ ಸಡಗರ


ಆತ್ಮೀಯ
ಬ್ಲಾಗಿಗರಿಗೆ....



ಮಕರ


ಸಂಕ್ರಾಂತಿ


ಹಬ್ಬದ


ಹಾರ್ದಿಕ

ಶುಭಾಶಯಗಳು.....!

- ಅಶೋಕ ಉಚ್ಚಂಗಿ.

Wednesday, January 7, 2009

ಮೊದಲನೆ ಮೈಸೂರು ಪಾಕ್.....!



ಪ್ರಿಯರೆ....
ಇದೋ ಇಲ್ಲಿದೆ ಮೈಸೂರು ಪಾಕ್!ಮೈಸೂರಿನ ಸ್ವಾರಸ್ಯಕರ ಸಂಗತಿಗಳು ಆಗಾಗ ನಿಮ್ಮ ಮನತಣಿಸಲು ಇಲ್ಲಿ ಕಾಣಿಸಿಕೊಳ್ಳುತ್ತವೆ.ಮೈಸೂರು ಪಾಕ್ ಎಂದರೆ ಸಿಹಿಯಷ್ಟೇ ಅಲ್ಲ,ಚಿಂತನಾರ್ಹ ಸಂಗತಿಗಳು ಇಲ್ಲಿ ಬೆಳಕು ಕಾಣುತ್ತವೆ.ಸೆಪ್ಪೆಯಂತೂ ಖಂಡಿತಾ ಆಗಿರಲಾರದು.ಮೈಸೂರು ಪಾಕಿಗೆ ನಿಮ್ಮ ಕೈ ಜೋಡಿಸಬಹುದು.ಮೈಸೂರಿಗೆ ಸಂಬಂಧಿಸಿದ ಸ್ವಾರಸ್ಯಗಳಿದ್ದರೆ ದಯವಿಟ್ಟು ತಿಳಿಸಿ.ಇಲ್ಲಿ ಪ್ರಕಟಿಸೋಣ.



ನಮ್ಮೂರಲ್ಲಿ ಮಹಾತ್ಮರ,ಪ್ರಸಿದ್ದರ ಹೆಸರಿನಲ್ಲಿ ರಸ್ತೆಯಿದೆ,ವೃತ್ತವಿದೆ ಎಂದು ನೀವು ಜಂಭಕೊಚ್ಚಬೇಡಿ.ನಮ್ಮೂರು ಮೈಸೂರಿನಲ್ಲಿ ಕೆಡಿ ಹೆಸರಲ್ಲೂ ರಸ್ತೆಯಿದೆ,ವೃತ್ತವಿದೆ...ಗೊತ್ತಾ...?
ಅರೆರೆ ಇದೇನು ಕೆಡಿ ಹೆಸರಲ್ಲೂ ರಸ್ತೆ,ವೃತ್ತವಿದೆಯಲ್ಲಾ ಮೈಸೂರಿನ ಸಂಸ್ಕೃತಿ ಇಷ್ಟೇನಾ ಎಂದು ಮೂಗು ಮುರಿಯಬೇಡಿ...... ಕೃಷ್ಣದೇವರಾಯ,ಕಾಳಿದಾಸರನ್ನುಪಂಕಾಗಿಏನೆನ್ನಬಹುದು ಹೇಳಿ? ಕೆ.ಡಿ!(Krishna Devaraya )..... ಮೈಸೂರಿನ ಪಡ್ಡೆ ಹೈಕಳ ಬಾಯಲ್ಲಿ ಕೃಷ್ಣದೇವರಾಯ ವೃತ್ತ ಕೆಡಿ ಸರ್ಕಲ್ ಆಗಿದೆ!ಕಾಳಿದಾಸ ರಸ್ತೆ ಕೆಡಿ ರೋಡ್ ಆಗಿದೆ. ಅಯ್ಯೋ ರಾ....!
~~~ಅಶೋಕ Uchangi***
ಚಿತ್ರಕೃಪೆ-ಇಂಡಿಯಾಫುಡ್‌ಫಾರೆವರ್

Tuesday, December 30, 2008

-*-*-* ನಾವು ಭಾರತೀಯರು (*(*

ನಾವು ಭಾರತೀಯರು ಅದರಲ್ಲೂ ಹಿಂದೂಗಳು ಹಬ್ಬಗಳ ವಿಷಯದಲ್ಲಿ ತುಂಬಾ ಧಾರಾಳಿಗಳು.ಆರ್ಥಿಕ ಮುಗ್ಗಟ್ಟಿರಲಿ,ವಿಪ್ಲವದ ವರ್ಷವಾಗಿರಲಿ ಹೊಸ ವರ್ಷವನ್ನು ಸಡಗರ,ಸಂಭ್ರಮದಿಂದ ಆಚರಿಸಲು ಸಜ್ಜಾಗುತ್ತಿದ್ದೇವೆ.
ನಾವು ಹಿಂದೂಗಳು ಅನೇಕ ಹಬ್ಬಹರಿದಿನಗಳನ್ನು ಆಚರಿಸುತ್ತೇವೆ.ಜೊತೆಗೆ ಇತರರ ಹಬ್ಬವನ್ನೂ!
ಯುಗಾದಿಯನ್ನು ಎಷ್ಟರ ಮಟ್ಟಿಗೆ ಆಚರಿಸುತ್ತೇವೋ,ಬಿಡ್ತೀವೋ ಜನವರಿ ಒಂದರ ಹೊಸವರ್ಷದ ಸ್ವಾಗತವನ್ನು ಈ "ಮದ್ಯ" ರಾತ್ರಿಯನ್ನು ಬಹಳ ‘ಶ್ರದ್ದೆಯಿಂದಆಚರಿಸಲು ಸಜ್ಜಾಗಿದ್ದೇವೆ ಅಲ್ಲವೆ? ಅದೇನೇ ಇರಲಿ
ಇಂದು ಪ್ರಾರ್ಥಿಸಲು ಕಾರಣವಿದೆ...
ನಮ್ಮೆಲ್ಲಾ ಸಂಕಷ್ಟಗಳು ದೂರಾಗಲೆಂದು ಇಂದೂ ಪ್ರಾರ್ಥಿಸೋಣ...ಯುಗಾದಿಯಂದೂ ಸಹ!
ನಿಮಗೆಲ್ಲರಿಗೂ ಹೊಸವರ್ಷ ಹೊಸತನ,ಸಂತಸ,ಸಂಭ್ರಮ ತರಲೆಂದು ನನ್ನ ಹಾರೈಕೆ.
ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಕಾಮನೆಗಳು!

****ಅಶೋಕ ಉಚ್ಚಂಗಿ*****

Monday, December 29, 2008

*** ರಂಗುರಂಗಿನ ರಂಗಾಯಣ ~~~

-*ನಾರಂಸಂಕಟ.....-*

ಮೈಸೂರಿನ ರಂಗಾಯಣದಲ್ಲಿ ಡಿಸೆಂಬರ್ ೨೫ ರಿಂದ ೨೯ರವರಗೆ ನಡೆದ ಬಹುರೂಪಿಯೆಂಬ ನಾಟಕೋತ್ಸವಕ್ಕೆ ನಾನಾರೂಪಗಳಿವೆ.ರಂಗಪ್ರಯೋಗಗಳಲ್ಲದೆ ಸಿನಿಮಾ,ಜಾನಪದ ಉತ್ಸವ,ಬಯಲು ನಾಟಕಗಳು,ವಿಚಾರಸಂಕಿರಣಗಳು,ಛ್ ಹೀಗೆ
ವಿವಿಧ ಬಣ್ಣಗಳ ಬಹುರೂಪಿ ಒಂದರ್ಥದಲ್ಲಿ ಜಾತ್ರೆಯೇ ಸರಿ.
ಸಿನಿಮಾರಂಗದಿಂದಾಗಿ ರಂಗಭೂಮಿ ಬಡಕಲಾಯಿತು,ವೃತ್ತಿಪರ ನಾಟಕ ಕಂಪನಿಗಳು ನೆಲಕಚ್ಚಿದವು, ಕಲಾವಿದರು ಅನಾಥರಾದರು ಎಂಬೆಲ್ಲಾ ಕೂಗು ಕೇಳಿರುವ ನೀವು ಶಭಾಷ್! ಮೈಸೂರಿನಲ್ಲಾದರೂ ರಂಗಕಲೆ ಉಸಿರಾಡುತ್ತಿದೆಯಲ್ಲಾ,ಪರವಾಗಿಲ್ಲಾ ಮೈಸೂರಿನ ಜನ ಎಂದು ನಮ್ಮ ಬೆನ್ನು ತಟ್ಟುತ್ತಿದ್ದೀರಲ್ಲವೇ?
ರಂಗಾಯಣದಭೂಮಿಗೀತದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೆ ಪ್ರವೇಶ ದರ ರೂ ೪೦ ನಿಗದಿಯಾಗಿತ್ತು.ಆದರೆ ಜನರೇ ಬರುತ್ತಿರಲಿಲ್ಲ. ದರವನ್ನು ೨೫ ರೂಗಳಿಗೆ ಇಳಿಸಿ,ಆಗಲಾದರೂ ಜನ ಬರುತ್ತಾರೋ ನೋಡೋಣ ಎಂದು ಅಳಲು ತೋಡಿಕೊಂಡ ಹವ್ಯಾಸಿ ರಂಗಕಲಾವಿದರು ಧರಣಿ ಕೂತರು.ಒಂದಷ್ಟುಬೀದಿನಾಟಕಗಳುನಡೆದ ಮೇಲೆ ಭಾನುವಾರದಿಂದ ಉಚಿತ ಪ್ರವೇಶ ಎಂದು ಘೋಷಿಸಲಾಯಿತು!
ಇದು ನೋಡಿ ಇಂದಿನ ರಂಗಭೂಮಿಯ ಸ್ಥಿತಿ !
ಸರಿ ಉಚಿತ ಪ್ರವೇಶ ಎಂದಾದ ಮೇಲೆ ಜನಸಾಮಾನ್ಯರು ಬಂದರೆ? ಉಹೂಂ...ಇಲ್ಲ.ಆದರೆ ರಂಗಮಂದಿರ ಭರ್ತಿಯಾಗುತ್ತಿತ್ತು.ಹೇಗೆ?
ಉಚಿತ ಪ್ರವೇಶವೆಂದ ಮೇಲೆ ಇಷ್ಟವಿರಲಿ ಬಿಡಲಿ ಒಂದಷ್ಟು
ರಂಗಾಸಕ್ತರು,ಕಲಾವಿದರು,ವಿಚಾರವಾದಿಗಳು,
ಕಲಾವಿದ್ಯಾರ್ಥಿಗಳು ಒಳಹೊಕ್ಕರು. ರಂಗಮಂದಿರ ತುಂಬಿತು..
ಇದು ರಂಗಾಯಣದ ಅಂಗಳದಲ್ಲಿನ ಗುಸುಗುಸು ಮಾತು.
ನಾವು ಜನಸಾಮಾನ್ಯರು ಇತರ ಮಾಧ್ಯಮಗಳ ಪ್ರಭಾವದಿಂದಲೋ,ನಾಟಕಗಳ ಬಗೆಗಿನ ಅನಾಸಕ್ತಿಯಿಂದಲೋ ಅಥವಾ ನಾಟಕಗಳಿಗೆ ಪ್ರಚಾರದ ಕೊರತೆಯಿಂದಲೋ ಉಚಿತವೆಂದರೂ ನೋಡಲು ಹೋಗೂಲ್ವಲ್ಲಾ....ಛೇ...ಎಂಥಾ...ದುರಂತ!
ಮೈಸೂರಿನಿಂದ ಪ್ರಕಟಗೊಳ್ಳುವ ಪಾಕ್ಷಿಕವೊಂದು ವಾರಕ್ಕೊಂದು ನಾಟಕದ ವಿಮರ್ಶೆ ಬರೆಯಿರಿ ಎಂದು ನನಗೆ ಆಹ್ವಾನ ನೀಡಿತು.ಅದಕ್ಕೆ ನಾನು ನಾಟಕಗಳನ್ನು ವಿಮರ್ಶಿಸುವಷ್ಟು ತಜ್ಞ ನಾನಲ್ಲ,ಬೇರೆ ಯಾರಿಗಾದರೂ ಹೇಳಿ ಎಂದು ತಿಳಿಸಿದೆ.ಅದಕ್ಕೆ ಸಂಪಾದಕರಿಂದ ಬಂದ ಉತ್ತರವೇನು ಗೊತ್ತೇ?ಮೊದಲಿಂದ ಕೊನೆವರೆಗೂ ನಾಟಕ ನೋಡಿ(- ಗಂಟೆ ಕೂತು) ವಿಮರ್ಶಿಸುವ ತಾಳ್ಮೆ ಇರುವವರು ಯಾರು ಇಲ್ಲಾ,ನಾವು ಅನೇಕರಲ್ಲಿ ವಿಚಾರಿಸಿದೆವು ಎಂದರು.ಹೀಗಿದೆ ನೋಡಿ ಇಂದಿನ ರಂಗನಾಟಕಗಳ ಸ್ಥಿತಿ.
ರಂಗಾಯಣವೆಂಬ ದೇಸಿ ಮಾರುಕಟ್ಟೆ!
ಬಹುರೂಪಿ ನಡೆವ ದಿನಗಳಲ್ಲಿ ಸಂಜೆಯಾಯಿತೆಂದರೆ ರಂಗಯಣದ ಅಂಗಳ ರಂಗೇರುತ್ತದೆ.ಕಾರಣ
ಇಲ್ಲಿನ ಆವರಣದಲ್ಲಿನ ಮಳಿಗೆಗಳನ್ನು ಸಂದರ್ಶಿಸಲು ಮೈಸೂರಿನ ಮೂಲೆಮೂಲೆಯಿಂದ ಜನ ಬರುತ್ತಾರೆ.
ರಂಗಾಯಣದ ಬಹುರೂಪಿ ಆರಂಭಕ್ಕೆ ಒಂದು ತಿಂಗಳು ಮುಂಚೆಯೇ ನನ್ನ ಮಡದಿ ಹೇಳುತ್ತಿದ್ದಳು.."ಕಳೆದ ಬಾರಿ ಬಹುರೂಪಿ ಜಾತ್ರೆಯಲ್ಲಿ ತಂದ ಬೆಡ್ಸ್ಪ್ರೆಡ್ ಚೆನ್ನಾಗಿದೆ ಸಲ
ಇನ್ನೊಂದು ತರಬೇಕು..". ನನ್ನ ಗೆಳೆಯ ಕೇಳಿದ "ಜೋಳದರೊಟ್ಟಿ ಇದೆಯೇನಪ್ಪಾ ಯಾವಾಗ ಹೋಗೋಣ?". ನಮ್ಮೂರಿನ(ಉತ್ತರ ಕನ್ನಡ ಜಿಲ್ಲೆ) ತೊಡೆದೇವು ಸಿಗುತ್ತಂತೆ.ನಾಳೆ ಹೋಗ್ತಿದ್ದೀವಿಎಂದರು ಪಕ್ಕದ ಮನೆಯ ಹೆಗಡೆ ಕುಟುಂಬ.
ಬಹುರೂಪಿಯಲ್ಲಿ ಯಾವ ನಾಟಕವಿದೆ ಎಂದು ಯಾರೂ ಕೇಳಲಿಲ್ಲ!!!
ಇಲ್ಲಿನ ಮಳಿಗೆಗಳು ದೇಸಿ ವಸ್ತುಗಳ ಜೊತೆಗೆ ಪುಸ್ತಕ,ದೇಸಿ ತಿಂಡಿತಿನಿಸುಗಳ ರುಚಿಯನ್ನು ನೋಡುಗರಿಗೆ ಪರಿಚಯಿಸಿವೆ. ಕಾರಣಕ್ಕೆ ಇಲ್ಲಿಗೆ ಜನ ಮುಗಿಬೀಳುತ್ತಾರೆ.
ನಿಜವಾದ ಅರ್ಥದಲ್ಲಿ ಬಹುರೂಪಿಯ ಸಾರ್ಥಕತೆ ನಮ್ಮ ಪರಂಪರೆಯನ್ನು ಪರಿಚಯಿದ್ದರಲ್ಲೇ!.
ಸಮಾರೋಪ
ನಿನ್ನೆ ಅಂದರೆ ಸೋಮವಾರ ಐದು ದಿನಗಳ ಬಹುರೂಪಿಗೆ ತೆರೆಬಿತ್ತು.ಅಭಿನಯ ಶಾರದೆ ಜಯಂತಿ ಬಂದಿದ್ದರು.ನಾಗಾಭರಣ ಇದ್ದರು.ಸಂಜೆ ಬಯಲು ರಂಗಮಂದಿರದಲ್ಲಿ ರಂಗಗೀತೆಯನ್ನು ಹಾಡುವುದರೊಂದಿಗೆ ಸಮಾರೋಪ ಕಾರ್ಯಕ್ರಮ ಆರಂಭವಾಯಿತು.ಬಯಲುರಂಗ ತುಂಬಿತ್ತು.ಜಯಂತಿ ಮೇಡಂರಿಂದಾಗಿ!
*ಸಮಾರೋಪ ಮುಗಿಸಿ ಅತ್ತ ಹೋದರು ಅಭಿನಯ ಶಾರದೆ ಜನರೂ ಖಾಲಿ ಮುಂದಿನ ನಾಟಕಕ್ಕೆ ಕಾಯದೆ!*
ಅರ್ಥವಾಯ್ತಲ್ಲಾ ಸಿನಿಮಾಕ್ಕೂ ನಾಟಕಕ್ಕೂ ಇರುವ ವ್ಯತ್ಯಾಸ.....
ನಾಟಕರಂಗದ ಸಂಕಟವನ್ನಷ್ಟೇ ಹೇಳುತ್ತಿದ್ದೀರಲ್ಲಾ ಪರಿಹಾರವೇನು ಇದಕ್ಕೆ ಎಂದು ನೀವು ಕೇಳಬಹುದು.ನಾನೂ ಬಗ್ಗೆ ತಲೆಕೆಡೆಸಿಕೊಂಡು ಸಿಕ್ಕಸಿಕ್ಕ ಬುದ್ದಿಜೀವಿಗಳನ್ನೆಲ್ಲಾ ಕೇಳಿದೆ.ಯಾರಿಂದಲೂ ಸಮರ್ಪಕ ಉತ್ತರವಿಲ್ಲ.
ಬಹುಷಃ ನಾಟಕರಂಗವು ಜನಸಾಮಾನ್ಯರಿಂದ ಬಹುದೂರ ಹೋಗಿಬಿಟ್ಟಿದೆಯೇನೋ? ಹಿಂತಿರುಗಿ ಬರಲಾರದಷ್ಟು...!!!
ಇದು ರಂಗಾಯಣದ ತಪ್ಪಲ್ಲ...ಯಾರನ್ನೂ ದೂರುವಂತಿಲ್ಲ.ಜನರನ್ನು ನಾಟಕದತ್ತ ಸೆಳೆಯಲು ಪ್ರಯತ್ನಿಸಬೇಕು.ರಂಗಾಯಣದಂತಹ ರೆಪೆರ್ಟರಿಗಳು ಕಸರತ್ತು ಮಾಡುತ್ತಿವೆ.ಅದಕ್ಕಾಗಿ ಎಲ್ಲಾ ನಾಟಕಗಳು”.
ಇವರೂ ಗೊಂದಲದಲ್ಲಿದ್ದಾರೆ...ಹೇಗೆ? ಫಲಕ ನೋಡಿ!!!!
ನಿಮ್ಮ ಜವಾಬ್ದಾರಿಯೇನು ಗೊತ್ತಾಯ್ತಲ್ಲ.ನಿಮ್ಮ ಕಾಮೆಂಟು,ಸಲಹೆಗಳು ರಂಗಾಯಣಕ್ಕೆ ತಲುಪುತ್ತವೆ.
-ಅಶೋಕ ಊಚ್ಚಂಗಿ.

Thursday, December 25, 2008

ಕ್ರಿಸ್‌ಮಸ್ ಚಕ್ಕುಲಿ,ಗರಿಗರಿ ವ್ಹೀಲ್!


ಆಹಾ....! ಕ್ರಿಸ್‌ಮಸ್ ತಿನಿಸು...ಬಲು ಸೊಗಸು

ಕ್ರಿಶ್ಚಿಯನ್ನರು ಹಬ್ಬಗಳನ್ನು ಅದರಲ್ಲೂ ಮುಖ್ಯವಾಗಿ ಕ್ರಿಸ್‌ಮಸ್ ಅನ್ನು ಕೇಕ್,ವೈನ್,ನಾನ್‌ವೆಜ್ ತಯಾರಿಸಿ ಚರ್ಚ್‌ಗೆ ಹೋಗಿ ಪ್ರೇಯರ್ ಮಾಡಿ ಮನೆಯಲ್ಲೋ ಇಲ್ಲ ಪಾರ್ಟಿಯಲ್ಲೋ ಕುಡಿದು ಕುಪ್ಪಳಿಸುತ್ತಾರೆ ಎಂಬುದು ನನ್ನ ತಿಳುವಳಿಕೆಯಾಗಿತ್ತು.
ನನ್ನ ಪತ್ನಿಯ ಗೆಳತಿಯೊಬ್ಬರು ನಮ್ಮ ಮನೆ ಹತ್ತಿರವೇ ಇದ್ದಾರೆ.ಅವರ ಹೆಸರು ಉಷಾ ಪಿಂಟೋ.ಬ್ಯೂಟಿ ಪಾರ್ಲರ್ ನಡೆಸುತ್ತಾರೆ ಕೊಂಕಣಿ ಕ್ರಿಶ್ಚಿಯನ್ನರು.(ಬ್ಯೂಟಿ ಪಾರ್ಲರ್‌ನವರು ಹೆಂಗಸರಿಗೆ ಆತ್ಮೀಯರಾಗೋದರಲ್ಲಿ ವಿಶೇಷವೇನಿಲ್ಲ ಎನ್ನುತ್ತೀರಾ?,,, ನಿಮ್ಮ ಮಾತು ನಿಜ ಅನ್ನಿ!) :)ಆದರೆ ಇವರು ನನ್ನ ಪತ್ನಿಗೆ ತುಂಬಾ ಆತ್ಮೀಯರು.ನಮ್ಮ ಕುಟುಂಬಕ್ಕೂ.
ನಾನು ಈಗ ಹೇಳಹೊರಟಿದ್ದು ಕ್ರಿಸ್ಮಸ್ ಆಚರಣೆಯ ಬಗ್ಗೆ ನನಗಿದ್ದ ಅಭಿಪ್ರಾಯ ಬದಲಾಯಿಸಿಕೊಳ್ಳಬೇಕಾದ ಬಗ್ಗೆ.ಇವರು ಈಗ ತಾನೆ ನಮ್ಮ ಮನೆಗೆ ಬಂದಿದ್ದರು.ಬೆಳಿಗ್ಗೆಯಿಂದ ಹಬ್ಬದ ಆಚರಣೆಯಲ್ಲಿ ಬಿಜಿಯಾಗಿದ್ದರೆನಿಸುತ್ತೆ.ಬಳಲಿದ್ದರು. ಏದುಸಿರು ಬಿಡುತ್ತಾ ಒಂದೈದು ನಿಮಿಷ ಮಾತನಾಡಿ ಹಬ್ಬದ ತಿಂಡಿಗಳನ್ನು ಕೊಟ್ಟು ಹೋದರು.ಕೇಕ್,ಚಕ್ಕುಲಿ,ರವೆ ಉಂಡೆ,ಸಿಹಿ ಉಂಡೆ,ಇನ್ನೆಂತದೋ ಒಂದು ಸಿಹಿಯಾದ ಗರಿಗರಿಯಾದ ವೀಲ್! ಇನ್ನು ಎಂತೆಂತದೋ ಸಿಹಿತಿಂಡಿಗಳು.ಜೊತೆಗೆ ಮನೆಯಲ್ಲೇ ಅವರು ತಯಾರಿಸಿದ ತಾಜಾ ವೈನ್ ನೀಡಿ ಶುಭ ಹಾರೈಸಿ ಗಡಿಬಿಡಿಯಲ್ಲಿ ಹೊರಟರು.ನಾಳೆ ಮಂಗಳೂರಿಗೆ ಹೋಗಬೇಕಂತೆ.

ಈ ತಿಂಡಿಗಳ ಹೆಸರು ಕೇಳಲು ಮನಸ್ಸಿದ್ದರೂ ಅವರ ತರಾತುರಿ ನೋಡಿ ಸುಮ್ಮನಾದೆ.ಬೆಳಿಗ್ಗೆ
ಮನೆಯಲ್ಲಿ ಪೂಜೆ ಮಾಡಿ ಇಡ್ಲಿ ಮಾಡಿದ್ದರಂತೆ.(ಇದನ್ನು ಮಾಡಲೇಬೇಕಂತೆ).ಇವರು ಕ್ರಿಸ್‌ಮಸ್ ಅನ್ನು ಹೀಗೆ ನಮ್ಮ ಸಂಪ್ರದಾಯಕ್ಕೆ ಹತ್ತಿರವಾಗಿ ಆಚರಿಸುತ್ತಾರೆ ಎಂಬುದು ನನಗರಿವಾದಾಗ ಈ ಬಗ್ಗೆ ಕುತೂಹಲ ಮೂಡಿತು.ಈ ಬಗ್ಗೆ ಕೇಳಿ ತಿಳಿದುಕೋಳ್ಳಬೇಕೆನಿಸಿತು.ಅವರ ಆತುರ ನೋಡಿ ಸುಮ್ಮನಾದೆ.ಅವರು ತಿರುಗಿ ಬಂದ ನಂತರ ಈ ಬಗ್ಗೆ ಕೇಳಿ ತಿಳಿದು ಕೊಂಡು ಬರೆಯುತ್ತೇನೆ.
ಈ ತಿಂಡಿಗಳನ್ನು ನೋಡಿದಾಗ ನನಗಂತೂ ಕೃಷ್ಣ ಜನ್ಮಾಷ್ಟಮಿ ನೆನಪಾಯಿತು.ನಾನು ಲಕ್ಷ್ಮಿ ಟಾಕಿಸ್ ಹಿಂಭಾಗ (ಮೈಸೂರು) ರೂಮಿನಲ್ಲಿದ್ದಾಗ ಅಲ್ಲಿನ ಅಯ್ಯಂಗಾರ್ ಅಂಕಲ್ ಮನೆಯಲ್ಲಿ ಮಾಡುತ್ತಿದ್ದ ಕೃಷ್ಣ ಜನ್ಮಾಷ್ಟಮಿಯ
ಕುರುಕಲು ತಿಂಡಿಗಳು ನೆನಪಾದವು. ಆಹಾ ಏನು ರುಚಿ....ಈಗಲೂ ಬಾಯಲ್ಲಿ ನೀರೂರುತ್ತೆ.(ಕೃಷ್ಣ ಜನ್ಮಾಷ್ಟಮಿ ಹತ್ತಿರ ಬಂದಂತೆ ಅಯ್ಯಂಗಾರರನ್ನು ವಿಶೇಷ ಪ್ರೀತಿಯಿಂದ ಮಾತನಾಡಿಸುತ್ತಿದ್ದೆ......ನನ್ನನ್ನು ಮರೆತು ಬಿಡಬಾರದೆಂದು..)
ಎಲ್ಲಿಯ ಕ್ರಿಸ್ಮಸ್ ಎಲ್ಲಿಯ ಕೃಷ್ಣ ಜನ್ಮಾಷ್ಟಮಿ.ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ? ಧರ್ಮ ಬೇರಾದರೂ ಆಚರಣೆಯಲ್ಲಿ ಅದೆಷ್ಟು ಸಾಮ್ಯತೆ?... ರ್ಮ ಹಲವು ಭಾವ ಒಂದು...! ಇದೇ ಅಲ್ಲವೇ ಇಂದಿನ ಭಾರತಕ್ಕೆ ಬೇಕಿರುವುದು....
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು!!!
--ಅಶೋಕ ಉಚ್ಚಂಗಿ.
ಸಾಂತಾಕ್ಲಾಸ್ ಚಿತ್ರ-ಗೂಗಲ್ ಕೃಪೆ.