ಚಳಿಗಾಲ ಮಳೆಗಾಲದಂತಿಲ್ಲ.ಆಗಾಗ ಕೊರೆವ ಚಳಿ,ಎಲ್ಲೋ ಒಂದೆರಡು ದಿನ ಬಿದ್ದ ಹಿಮ,ಆದರೂ ಚಳಿಗಾಲದ ಬೆಳಗಿನ ನೋಟ ವಿಭಿನ್ನವೇ ಸರಿ.ಹಾಲಿನವ ಇಷ್ಟು ಮುಂಚೆ ಏಕೆ ಬರುತ್ತಾನೋ ಎಂದು ಬೈದುಕೊಳ್ಳುವ ಕಾಲವಿದು.ಪ್ಯಾಕೇಟ್ ಹಾಲಾದರೆ ಎಷ್ಟು ಹೊತ್ತಿಗಾದರೂ ಸಿಗುತ್ತೇ ಅದೇ ಸರಿ ಎನ್ನುವ ಸೋಮಾರಿ ಮನಸ್ಸು.ಬೈಗಿನಲ್ಲಿ ಹೊರಟು ಸುಖ ನಿದ್ರೆ ಕೆಡಿಸುವ ಹಾಲಪ್ಪ,ಹಾಲಮ್ಮಂದಿರಿಗೆ ಈ ಫೋಟೋ ಅರ್ಪಣೆ!!
ಕ್ರಿಸ್ಮಸ್ ಎಂದರೆ ಚರ್ಚ್ ನಲ್ಲಿ ಪ್ರಾರ್ಥಿಸಿ ಬಂದು ಮನೆಯಲ್ಲಿ ನಾನ್ ವೆಜ್ ಅಡಿಗೆ ಮಾಡಿ ತಿಂಡುಂಡು ವೈನ್ ಕುಡಿದು ಸಂಭ್ರಮಿಸುವುದು. ಹಾಗಂತ ತಪ್ಪು ತಿಳಿದುಕೊಂಡಿದ್ದ ಅಶೋಕ್ ಉಚ್ಚಂಗಿ ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರಂತೆ. ಅದಕ್ಕೆ ಕಾರಣವೂ ಇದೆ. ನಿನ್ನೆ ಕ್ರಿಸ್ಮಸ್ ಹಬ್ಬದ ದಿನ ಅವರ ಮಡದಿಯ ಗೆಳತಿಯೊಬ್ಬರು ಮನೆಗೆ ಕೊಟ್ಟು ಹೋದ ತಿಂಡಿಗಳು ಅವರ ಅಭಿಪ್ರಾಯ ಬದಲಿಸಿದೆ. ‘ಕೇಕ್,ಚಕ್ಕುಲಿ,ರವೆ ಉಂಡೆ,ಸಿಹಿ ಉಂಡೆ,ಇನ್ನೆಂತದೋ ಒಂದು ಸಿಹಿಯಾದ ಗರಿಗರಿಯಾದ ವೀಲ್! ಇನ್ನು ಎಂತೆಂತದೋ ಸಿಹಿತಿಂಡಿಗಳ ಜೊತೆಗೊಂದು ತಾಜಾ ವೈನ್ ಅನ್ನು ಕಂಡ ಅಶೋಕ್ ಮನಸ್ಸು ತಪ್ಪು ತಿಳಿದುಕೊಂಡಿದ್ದಕ್ಕೆ ಪರಿತಪಿಸುತ್ತಿದೆ. ನಮ್ಮ ಸಂಪ್ರದಾಯಕ್ಕೆ ಹತ್ತಿರವಾಗಿ ಆಚರಿಸುವ ಅವರ ಆಚರಣೆ ಕಂಡು ಅಶೋಕರಿಗೆ ಕೃಷ್ಣ ಜನ್ಮಾಷ್ಟಮಿಯ ನೆನಪಾಗಿದೆಯಂತೆ. ಅದಕ್ಕೂ ಕ್ರಿಸ್ಮಸ್ ಗೂ ಏನು ಸಂಬಂಧ ಅನ್ನುವವರು ಈ ಬ್ಲಾಗಿಗೇ ಹೋಗಿ ತಿಳಿದುಕೊಳ್ಳಬೇಕು.
ತಾವು ಬಹುವಾಗಿ ಮೆಚ್ಚಿಕೊಂಡ ಮೈಸೂರಿನ ನೆನಪಲ್ಲೇ ಅಶೋಕ್ ತಮ್ಮ ಬ್ಲಾಗಿಗೆ ‘ಮೈಸೂರು ಮಲ್ಲಿಗೆ’ ಅಂತಲೇ ಹೆಸರಿಟ್ಟಿದ್ದಾರೆ. ಈಚೀಗೆ ಅವರು ಬರೆದ, ಕೈಯಲ್ಲಿ ಬುಟ್ಟಿ ಹಿಡಿದು ಸಾಲಾಗಿ ವ್ಯಾಪಾರಕ್ಕೆ ಹೊರಟ ಮಕ್ಕಳ ಸಾಗರಕಟ್ಟೆ ರೈಲ್ವೆ ಸ್ಟೇಷನ್ನಿನ ಕಥನ ಕಣ್ಣಿಗೆ ಕಟ್ಟುವಂತಿದೆ. ಆಮೇಲೆ ಮಕ್ಕಳಿಗೆ ದಿನಕ್ಕೊಂದು ಸುಳ್ಳು ಕಥೆಯೂ ಇದೆ. ಈಗಷ್ಟೆ ಬರೆಯಹೊರಟಿರುವ ಅಶೋಕರ ಮಲ್ಲಿಗೆ ಕಂಪು ಸವಿಯಬೇಕಿದ್ದವರು ಮೈಸೂರಿನ ಮಲ್ಲಿಗೆಯತ್ತ ಧಾವಿಸಬಹುದು.