Monday, December 29, 2008

*** ರಂಗುರಂಗಿನ ರಂಗಾಯಣ ~~~

-*ನಾರಂಸಂಕಟ.....-*

ಮೈಸೂರಿನ ರಂಗಾಯಣದಲ್ಲಿ ಡಿಸೆಂಬರ್ ೨೫ ರಿಂದ ೨೯ರವರಗೆ ನಡೆದ ಬಹುರೂಪಿಯೆಂಬ ನಾಟಕೋತ್ಸವಕ್ಕೆ ನಾನಾರೂಪಗಳಿವೆ.ರಂಗಪ್ರಯೋಗಗಳಲ್ಲದೆ ಸಿನಿಮಾ,ಜಾನಪದ ಉತ್ಸವ,ಬಯಲು ನಾಟಕಗಳು,ವಿಚಾರಸಂಕಿರಣಗಳು,ಛ್ ಹೀಗೆ
ವಿವಿಧ ಬಣ್ಣಗಳ ಬಹುರೂಪಿ ಒಂದರ್ಥದಲ್ಲಿ ಜಾತ್ರೆಯೇ ಸರಿ.
ಸಿನಿಮಾರಂಗದಿಂದಾಗಿ ರಂಗಭೂಮಿ ಬಡಕಲಾಯಿತು,ವೃತ್ತಿಪರ ನಾಟಕ ಕಂಪನಿಗಳು ನೆಲಕಚ್ಚಿದವು, ಕಲಾವಿದರು ಅನಾಥರಾದರು ಎಂಬೆಲ್ಲಾ ಕೂಗು ಕೇಳಿರುವ ನೀವು ಶಭಾಷ್! ಮೈಸೂರಿನಲ್ಲಾದರೂ ರಂಗಕಲೆ ಉಸಿರಾಡುತ್ತಿದೆಯಲ್ಲಾ,ಪರವಾಗಿಲ್ಲಾ ಮೈಸೂರಿನ ಜನ ಎಂದು ನಮ್ಮ ಬೆನ್ನು ತಟ್ಟುತ್ತಿದ್ದೀರಲ್ಲವೇ?
ರಂಗಾಯಣದಭೂಮಿಗೀತದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೆ ಪ್ರವೇಶ ದರ ರೂ ೪೦ ನಿಗದಿಯಾಗಿತ್ತು.ಆದರೆ ಜನರೇ ಬರುತ್ತಿರಲಿಲ್ಲ. ದರವನ್ನು ೨೫ ರೂಗಳಿಗೆ ಇಳಿಸಿ,ಆಗಲಾದರೂ ಜನ ಬರುತ್ತಾರೋ ನೋಡೋಣ ಎಂದು ಅಳಲು ತೋಡಿಕೊಂಡ ಹವ್ಯಾಸಿ ರಂಗಕಲಾವಿದರು ಧರಣಿ ಕೂತರು.ಒಂದಷ್ಟುಬೀದಿನಾಟಕಗಳುನಡೆದ ಮೇಲೆ ಭಾನುವಾರದಿಂದ ಉಚಿತ ಪ್ರವೇಶ ಎಂದು ಘೋಷಿಸಲಾಯಿತು!
ಇದು ನೋಡಿ ಇಂದಿನ ರಂಗಭೂಮಿಯ ಸ್ಥಿತಿ !
ಸರಿ ಉಚಿತ ಪ್ರವೇಶ ಎಂದಾದ ಮೇಲೆ ಜನಸಾಮಾನ್ಯರು ಬಂದರೆ? ಉಹೂಂ...ಇಲ್ಲ.ಆದರೆ ರಂಗಮಂದಿರ ಭರ್ತಿಯಾಗುತ್ತಿತ್ತು.ಹೇಗೆ?
ಉಚಿತ ಪ್ರವೇಶವೆಂದ ಮೇಲೆ ಇಷ್ಟವಿರಲಿ ಬಿಡಲಿ ಒಂದಷ್ಟು
ರಂಗಾಸಕ್ತರು,ಕಲಾವಿದರು,ವಿಚಾರವಾದಿಗಳು,
ಕಲಾವಿದ್ಯಾರ್ಥಿಗಳು ಒಳಹೊಕ್ಕರು. ರಂಗಮಂದಿರ ತುಂಬಿತು..
ಇದು ರಂಗಾಯಣದ ಅಂಗಳದಲ್ಲಿನ ಗುಸುಗುಸು ಮಾತು.
ನಾವು ಜನಸಾಮಾನ್ಯರು ಇತರ ಮಾಧ್ಯಮಗಳ ಪ್ರಭಾವದಿಂದಲೋ,ನಾಟಕಗಳ ಬಗೆಗಿನ ಅನಾಸಕ್ತಿಯಿಂದಲೋ ಅಥವಾ ನಾಟಕಗಳಿಗೆ ಪ್ರಚಾರದ ಕೊರತೆಯಿಂದಲೋ ಉಚಿತವೆಂದರೂ ನೋಡಲು ಹೋಗೂಲ್ವಲ್ಲಾ....ಛೇ...ಎಂಥಾ...ದುರಂತ!
ಮೈಸೂರಿನಿಂದ ಪ್ರಕಟಗೊಳ್ಳುವ ಪಾಕ್ಷಿಕವೊಂದು ವಾರಕ್ಕೊಂದು ನಾಟಕದ ವಿಮರ್ಶೆ ಬರೆಯಿರಿ ಎಂದು ನನಗೆ ಆಹ್ವಾನ ನೀಡಿತು.ಅದಕ್ಕೆ ನಾನು ನಾಟಕಗಳನ್ನು ವಿಮರ್ಶಿಸುವಷ್ಟು ತಜ್ಞ ನಾನಲ್ಲ,ಬೇರೆ ಯಾರಿಗಾದರೂ ಹೇಳಿ ಎಂದು ತಿಳಿಸಿದೆ.ಅದಕ್ಕೆ ಸಂಪಾದಕರಿಂದ ಬಂದ ಉತ್ತರವೇನು ಗೊತ್ತೇ?ಮೊದಲಿಂದ ಕೊನೆವರೆಗೂ ನಾಟಕ ನೋಡಿ(- ಗಂಟೆ ಕೂತು) ವಿಮರ್ಶಿಸುವ ತಾಳ್ಮೆ ಇರುವವರು ಯಾರು ಇಲ್ಲಾ,ನಾವು ಅನೇಕರಲ್ಲಿ ವಿಚಾರಿಸಿದೆವು ಎಂದರು.ಹೀಗಿದೆ ನೋಡಿ ಇಂದಿನ ರಂಗನಾಟಕಗಳ ಸ್ಥಿತಿ.
ರಂಗಾಯಣವೆಂಬ ದೇಸಿ ಮಾರುಕಟ್ಟೆ!
ಬಹುರೂಪಿ ನಡೆವ ದಿನಗಳಲ್ಲಿ ಸಂಜೆಯಾಯಿತೆಂದರೆ ರಂಗಯಣದ ಅಂಗಳ ರಂಗೇರುತ್ತದೆ.ಕಾರಣ
ಇಲ್ಲಿನ ಆವರಣದಲ್ಲಿನ ಮಳಿಗೆಗಳನ್ನು ಸಂದರ್ಶಿಸಲು ಮೈಸೂರಿನ ಮೂಲೆಮೂಲೆಯಿಂದ ಜನ ಬರುತ್ತಾರೆ.
ರಂಗಾಯಣದ ಬಹುರೂಪಿ ಆರಂಭಕ್ಕೆ ಒಂದು ತಿಂಗಳು ಮುಂಚೆಯೇ ನನ್ನ ಮಡದಿ ಹೇಳುತ್ತಿದ್ದಳು.."ಕಳೆದ ಬಾರಿ ಬಹುರೂಪಿ ಜಾತ್ರೆಯಲ್ಲಿ ತಂದ ಬೆಡ್ಸ್ಪ್ರೆಡ್ ಚೆನ್ನಾಗಿದೆ ಸಲ
ಇನ್ನೊಂದು ತರಬೇಕು..". ನನ್ನ ಗೆಳೆಯ ಕೇಳಿದ "ಜೋಳದರೊಟ್ಟಿ ಇದೆಯೇನಪ್ಪಾ ಯಾವಾಗ ಹೋಗೋಣ?". ನಮ್ಮೂರಿನ(ಉತ್ತರ ಕನ್ನಡ ಜಿಲ್ಲೆ) ತೊಡೆದೇವು ಸಿಗುತ್ತಂತೆ.ನಾಳೆ ಹೋಗ್ತಿದ್ದೀವಿಎಂದರು ಪಕ್ಕದ ಮನೆಯ ಹೆಗಡೆ ಕುಟುಂಬ.
ಬಹುರೂಪಿಯಲ್ಲಿ ಯಾವ ನಾಟಕವಿದೆ ಎಂದು ಯಾರೂ ಕೇಳಲಿಲ್ಲ!!!
ಇಲ್ಲಿನ ಮಳಿಗೆಗಳು ದೇಸಿ ವಸ್ತುಗಳ ಜೊತೆಗೆ ಪುಸ್ತಕ,ದೇಸಿ ತಿಂಡಿತಿನಿಸುಗಳ ರುಚಿಯನ್ನು ನೋಡುಗರಿಗೆ ಪರಿಚಯಿಸಿವೆ. ಕಾರಣಕ್ಕೆ ಇಲ್ಲಿಗೆ ಜನ ಮುಗಿಬೀಳುತ್ತಾರೆ.
ನಿಜವಾದ ಅರ್ಥದಲ್ಲಿ ಬಹುರೂಪಿಯ ಸಾರ್ಥಕತೆ ನಮ್ಮ ಪರಂಪರೆಯನ್ನು ಪರಿಚಯಿದ್ದರಲ್ಲೇ!.
ಸಮಾರೋಪ
ನಿನ್ನೆ ಅಂದರೆ ಸೋಮವಾರ ಐದು ದಿನಗಳ ಬಹುರೂಪಿಗೆ ತೆರೆಬಿತ್ತು.ಅಭಿನಯ ಶಾರದೆ ಜಯಂತಿ ಬಂದಿದ್ದರು.ನಾಗಾಭರಣ ಇದ್ದರು.ಸಂಜೆ ಬಯಲು ರಂಗಮಂದಿರದಲ್ಲಿ ರಂಗಗೀತೆಯನ್ನು ಹಾಡುವುದರೊಂದಿಗೆ ಸಮಾರೋಪ ಕಾರ್ಯಕ್ರಮ ಆರಂಭವಾಯಿತು.ಬಯಲುರಂಗ ತುಂಬಿತ್ತು.ಜಯಂತಿ ಮೇಡಂರಿಂದಾಗಿ!
*ಸಮಾರೋಪ ಮುಗಿಸಿ ಅತ್ತ ಹೋದರು ಅಭಿನಯ ಶಾರದೆ ಜನರೂ ಖಾಲಿ ಮುಂದಿನ ನಾಟಕಕ್ಕೆ ಕಾಯದೆ!*
ಅರ್ಥವಾಯ್ತಲ್ಲಾ ಸಿನಿಮಾಕ್ಕೂ ನಾಟಕಕ್ಕೂ ಇರುವ ವ್ಯತ್ಯಾಸ.....
ನಾಟಕರಂಗದ ಸಂಕಟವನ್ನಷ್ಟೇ ಹೇಳುತ್ತಿದ್ದೀರಲ್ಲಾ ಪರಿಹಾರವೇನು ಇದಕ್ಕೆ ಎಂದು ನೀವು ಕೇಳಬಹುದು.ನಾನೂ ಬಗ್ಗೆ ತಲೆಕೆಡೆಸಿಕೊಂಡು ಸಿಕ್ಕಸಿಕ್ಕ ಬುದ್ದಿಜೀವಿಗಳನ್ನೆಲ್ಲಾ ಕೇಳಿದೆ.ಯಾರಿಂದಲೂ ಸಮರ್ಪಕ ಉತ್ತರವಿಲ್ಲ.
ಬಹುಷಃ ನಾಟಕರಂಗವು ಜನಸಾಮಾನ್ಯರಿಂದ ಬಹುದೂರ ಹೋಗಿಬಿಟ್ಟಿದೆಯೇನೋ? ಹಿಂತಿರುಗಿ ಬರಲಾರದಷ್ಟು...!!!
ಇದು ರಂಗಾಯಣದ ತಪ್ಪಲ್ಲ...ಯಾರನ್ನೂ ದೂರುವಂತಿಲ್ಲ.ಜನರನ್ನು ನಾಟಕದತ್ತ ಸೆಳೆಯಲು ಪ್ರಯತ್ನಿಸಬೇಕು.ರಂಗಾಯಣದಂತಹ ರೆಪೆರ್ಟರಿಗಳು ಕಸರತ್ತು ಮಾಡುತ್ತಿವೆ.ಅದಕ್ಕಾಗಿ ಎಲ್ಲಾ ನಾಟಕಗಳು”.
ಇವರೂ ಗೊಂದಲದಲ್ಲಿದ್ದಾರೆ...ಹೇಗೆ? ಫಲಕ ನೋಡಿ!!!!
ನಿಮ್ಮ ಜವಾಬ್ದಾರಿಯೇನು ಗೊತ್ತಾಯ್ತಲ್ಲ.ನಿಮ್ಮ ಕಾಮೆಂಟು,ಸಲಹೆಗಳು ರಂಗಾಯಣಕ್ಕೆ ತಲುಪುತ್ತವೆ.
-ಅಶೋಕ ಊಚ್ಚಂಗಿ.

10 comments:

Santhosh Rao said...

ಅಶೋಕ್ ಸಾರ್ ... ಚೆನ್ನಾಗಿ ಬರೆದಿದ್ದೀರ .. ಆದರೆ ರಂಗಾಯಣದ್ದು ತಪ್ಪಿಲ್ಲ ಅಂತ ಹೇಳಿದ್ರಿ ..ಅದು ಒಪ್ಪುವ ಮಾತಲ್ಲ, ಬೆಡ್‌ಸ್ಪ್ರೆಡ್ , ಜೋಳದ ರೊಟ್ಟಿ ಅವರಿಗೆ advertisement tool ಅಂತ ಅಂದ್ಕೊಂಡಿದ್ದಾರೆ .

ನಾನು ವೃತ್ತಿ ರಂಗಭುಮಿಯವರ ಬಗ್ಗೆ ಬರೆದಿದ್ದೆ .. http://santhoshrao.blogspot.com/2008/11/blog-post_26.html

ಸಮಯ ಸಿಕ್ಕಾಗ ಓದಿ

shivu.k said...

ಆಶೋಕ್,

ಬರವಣಿಗೆಯಲ್ಲಿ ನೋವಿದೆ. ಕಾಳಜಿಯಿದೆ. ಸರಳವಾಗಿ ಸೊಗಸಾಗಿದೆ. ನಮ್ಮ ನಾಟಕ, ರಂಗಭೂಮಿಗೆ ಈ ಗತಿ ಬರಬಾರದಿತ್ತು. ನನಗೆ ಭರವಸೆಯಿದೆ. ಈ ಅರ್ಥಿಕ ಬಿಕ್ಕಟ್ಟಿನಿಂದಾಗಿ ಜನರ ಹಣ ಕಾಲಿಯಾಗಿ ಕೊನೆಗೆ ತಮ್ಮ ಮೂಲನೆಲೆಗೆ ಮರಳುವಾಗ ನಾಟಕ ರಂಗಭೂಮಿಯನ್ನು ಅಪ್ಪಿಕೊಳ್ಳುತ್ತಾರೆ. ಕಾಯಬೇಕಷ್ಟೇ....

Ashok Uchangi said...

ಪ್ರಿಯ ಸಂತೋಷ್
ರಂಗಾಯಣ ಎಲ್ಲಿದೆ ಎಂದು ಕೇಳುವ ಮಂದಿ ಈ ದೇಸಿ advertisement tool ಮೂಲಕವಾದರೂ ಇಲ್ಲಿಗೆ ಬಂದು ನಾಟಕದ ಅಭಿರುಚಿ ಬೆಳೆಸಿಕೊಳ್ಳಲಿ ಎಂಬ ಆಶಯ ರಂಗಾಯಣದ್ದಾಗಿರಬಹುದು.ನನ್ನ ಲೇಖನದಲ್ಲಿ ಬರೆದಿರುವಂತೆ
ಈ ಉದ್ದೇಶವೂ ವಿಫಲವಾಗಿದೆ.ಬಿಟ್ಟಿ ನಾಟಕಕ್ಕೂ ಜನ ಇಲ್ಲ.ವೃತ್ತಿ ರಂಗಭೂಮಿಯವರಂತೆ ಇಲ್ಲಿಯೂ ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡವರಿದ್ದಾರೆ.ಎಲ್ಲರೂ ಸಿರಿವಂತರಲ್ಲ.
ನನ್ನ ಉದ್ದೇಶ ಜನ ಏಕೆ ನಾಟಕದ ಬಗ್ಗೆ ಅನಾದರ ತೋರಿಸುತ್ತಿದ್ದಾರೆ ಮತ್ತು ಇದಕ್ಕೆ ಪರಿಹಾರವೇನು ಎಂಬುದು ತಿಳಿಯುವ ಪ್ರಯತ್ನ.ನಿಮ್ಮ ಅಭಿಪ್ರಾಯವೇನು?
ವಿಶ್ವಾಸವಿರಲಿ
ಅಶೋಕ ಉಚ್ಚಂಗಿ.

Ashok Uchangi said...

ಪ್ರಿಯ ಶಿವು
ನಿಮ್ಮ ಹಾರೈಕೆ ನಿಜವಾಗಲಿ!
ನಿಮ್ಮ ಟೋಪಿ ಚೆನ್ನಾಗಿವೆ.ನೋಡಲು ಅನೇಕರಿಗೆ ತಿಳಿಸಿದ್ದೇನೆ.
ಅಶೋಕ ಉಚ್ಚಂಗಿ.

Santhosh Rao said...

@Ashok sir..

ನಿಮ್ಮ ಮಾತು ಒಪ್ಪುವಂತಹದು.. ಆದರೆ ರಂಗಾಯಣ Shopping Mall ಆಗದಿರಲಿ ...

ರಾಘವೇಂದ್ರ ಕೆಸವಿನಮನೆ. said...

ಅಶೋಕ್,
ನಾನು ಈ ಬಾರಿಯ ಬಹರೂಪಿ ಪೂರ್ತಿ ನೋಡಲಾಗಲಿಲ್ಲ.!! ಕೊನೇ ದಿನ ಹೋಗಿದ್ದೆ.!! ಕೇವಲ ಸಭಾ ಕಾರ್ಯಕ್ರಮ ಮಾತ್ರವಲ್ಲ, ವ್ಯಾಪಾರೀ ಮಳಿಗೆಗಳೂ ಜನರಿಲ್ಲದೆ ಬಣಗುಡುತ್ತಿದ್ದವು.ಇದು ಈ ಬಾರಿಯ ಬಹುರೂಪಿಯ ಸಮಸ್ಯೆ ಮಾತ್ರವಲ್ಲ, ಈಚೆಗೆ ಎರಡು ವರ್ಷಗಳಿಂದ ಸಂಖ್ಯೆ ಇಳಿಮುಖವಾಗುತ್ತಿದೆ. ಇದನ್ನು ರಂಗಾಯಣ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ..
ಇನ್ನು ನಾಟಕ ವಿಮರ್ಶೆ. ಈಗ ಪ್ರಕಟವಾಗುತ್ತಿರುವ ಕೆಲ ವಿಮರ್ಶೆ (!)ಗಳನ್ನು ನೋಡಿದರೆ ಆ ಬಗ್ಗೆ ಮಾತನಾಡದಿರುವುದೇ ಒಳ್ಳೆಯದೆನಿಸುತ್ತದೆ.
ಅದನೇ ಇರಲಿ. ನಿಮ್ಮ ಬರಹದ ಹಿಂದಿರುವ ಕಾಳಜಿ ಅಭಿನಂದನೀಯ..
- ರಾಘವೇಂದ್ರ ಕೆಸವಿನಮನೆ.

Ashok Uchangi said...

ಮಿತ್ರರೊಬ್ಬರ ಪತ್ರ.

ಅಶೋಕ್,
ನಮಸ್ಕಾರ. ನೀವು ಆಗಾಗ ಪತ್ರಿಕೆಗಳಲ್ಲಿ ನಿಮ್ಮ ನುಡಿಚಿತ್ರ, ಛಾಯಚಿತ್ರಗಳ ಮೂಲಕ ಸಿಗುತ್ತಿದ್ದಿರಿ. ಈಗ ನೆಟ್ ಪ್ರಂಚದಲ್ಲಿ ಸಿಕ್ಕಿದ್ದೀರಿ. ದೇಸಿ ಮಾತು ಬ್ಲಾಗಿನಲ್ಲಿ ಅಲೆಯುತ್ತಿದ್ದಾಗ ನಿಮ್ಮ 'ಮೈಸೂರು ಮಲ್ಲಿಗೆ' ಕಂಪು ತಾಗಿತು. ಅದರ ಜಾಡು ಹಿಡಿದು ಇಲ್ಲಿವರೆಗೆ ತಲುಪಿದ್ದೀನಿ.

ಕನ್ನಡದಲ್ಲಿ ಬ್ಲಾಗಿಂಗ್ ಮಾಡೋದು ಒಂದು ಆನಂದಮಯ ಅನುಭವ. ಬ್ಲಾಗಿಂಗ್ ಒಂದೇ ಅಲ್ಲ, ಕನ್ನಡದಲ್ಲಿ ಮಾತು, ಹರಟೆ, ಓದು ಎಲ್ಲವೂ ಖುಷಿ ಕೊಡುತ್ತೆ.

ಹೇಗಿದ್ದೀರಿ? ನಿಮ್ಮ ಮುಖ ಮುಖಿ ಭೇಟಿಯಾಗಿ ಬಹಳ ವರ್ಷಗಳೇ ಆಗಿವೆ. ನಾನು ನಾಲ್ಕು ವರ್ಷಗಳಿಂದ ಹಾಸನದಲ್ಲೇ ಇದ್ದೀನಿ.

'ಸಾಗರಕಟ್ಟೆ ರೈಲ್ವೇ ಸ್ಟೇಷನ್' ಚೆನ್ನಾಗಿದೆ. ಈ ನಿಲ್ಲ್ದಾಣ ಹಾಸನ-ಮೈಸೂರು ಮಾರ್ಗದ ಒಂದು ವೈಶಿಷ್ಟ್ಯ ಎನ್ನಬಹುದು. ಅದು ಆ ಶಾಲಾ ಮಕ್ಕಳಿಂದಾಗಿ. ಹಾಸನದಿಂದ ಮೈಸೂರಿಗೆ ರೈಲಿನಲ್ಲಿ ಬರುವಾಗ ನಾನು ಏನಾದರು ಓದುತ್ತಿದ್ದರೆ, ಸಾಗರಕಟ್ಟೆಯಲ್ಲಿ ನನ್ನ ಓದು ಅಲ್ಪ ವಿರಾಮ ತೆಗೆದುಕೊಳ್ಳುತ್ತೆ. ನನ್ನ ಗಮನ ಆ ಮಕ್ಕಳ್ಳತ್ತ ಹೋಗುತ್ತೆ. ಒಮ್ಮೆ ಅಲ್ಲಿ ನೋಡಿದ ಒಂದು ದೃಶ್ಯ ಈಗಲೂ ಕಾಡುತ್ತೆ. ಒಬ್ಬ ವಿದ್ಯಾರ್ಥಿ ತಟ್ಟೆಯಲ್ಲಿ ತರಕಾರಿ ಇಟ್ಟುಕೊಂಡು ನಾನಿದ್ದ ರೈಲಿನ ಕಿಟಕಿಯಿಂದ ಕಿಟಕಿಗೆ ಓಡುತಿದ್ದ. ತನ್ನ ತಟ್ಟೆಯಲ್ಲಿರುವ ಒಂದಿಷ್ಟು ತರಕಾರಿಯನ್ನು ರೈಲು ಹೊರಡುವ ಮುನ್ನ ಮಾರಟ ಮಾಡುವ ಗುರಿ ಅವನದು. ಈ ಗಡಿಬಿಡಿಯಲ್ಲಿ ಪ್ಲಾಟ್‍ಫಾರಂ ಮೇಲಿನ ಒಂದು ಕಲ್ಲಿಗೆ ಎಡವಿಕೊಂಡು ಕಾಲಿನ ಹೆಬ್ಬೆರಳಿನಿಂದ ರಕ್ತ ಬರುತಿತ್ತು. ಅದನ್ನು ಲೆಕ್ಕಿಸದೆ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದ. ರೈಲು ಹೊರಡುವಾಗ ಅವನ್ನೆಲ್ಲಿದ್ದಾನೆಂದು ಇಣುಕಿ ನೋಡಿದೆ ಎಲ್ಲಿ ಹೋದ, ಅವನ ತರಕಾರಿ ಮಾರಾಟ ಆಯಿತೊ ಇಲ್ಲವೊ ಗೊತ್ತಾಗಲಿಲ್ಲ.
ಕಳೆದ ತಿಂಗಳು ಮೈಸೂರಿಗೆ ರೈಲಿನಲ್ಲಿ ಬಂದಿದ್ದೆ. ಅಂದು ಶನಿವಾರ. ಮಾರ್ನಿಂಗ್ ಕ್ಲಾಸ್. ಹಾಗಾಗಿ ಸಾಗರಕಟ್ಟೆ ಮಕ್ಕಳ ದರ್ಶನ ಆಗಲಿಲ್ಲ.

ಅಂದು ರಂಗಾಯಣಕ್ಕೆ ಬಂದಿದ್ದೆ. ರಂಗಾಯಣಕ್ಕೆ ಅದೇ ಮೊದಲ ಭೇಟಿ. ಎರಡು ನಾಟಕ ನೋಡಿದೆ. ಒಂದು 'ಕೋರ್ಟ್ ಮಾರ್ಷಲ್' ಇನ್ನೊಂದು " ಗಿರಿಜಾಕೆ ರಂಗೀನ್ ಸಪ್ನೆ". ಎರಡೂ ಚೆನ್ನಾಗಿದ್ದವು. ಕಲಾಮಂದಿರದ ಪಡಸಾಲೆಯಲ್ಲಿ ಛಾಯಚಿತ್ರ ಪ್ರದರ್ಶನವನ್ನೂ ನೋಡಿದೆ.

ಮೈಸೂರಿನ ಡಿಸ್ಟ್ರಿಕ್ಟ್ ಫೋಟೋ ಮತ್ತು ವಿಡಿಯೋಗ್ರಾಫರ್ ರವರ "ಛಾಯ ಮಿಲನ"ವನ್ನು ನೋಡಲು ಮರೆಯಲಿಲ್ಲ. ಅಲ್ಲಿ ನೋಡಿದ ಫೋಟೊಗಳು ಕಣ್ಣಿಗೆ ಹಬ್ಬದ ಅನುಭವ ನೀಡಿದವು. ಅವುಗಳಲ್ಲಿ ಬಹುಮಾನಕ್ಕೆ ಆರಿಸಲು ತೀರ್ಪುಗಾರರು ಎಷ್ಟು ಪರದಾಡಿರಬಹುದು?!! really wonderful photographs!!!!!!!

ನಾಟಕ ರಂಗದ ಸಂಕಟ: ಬಹುಶಃ ಪ್ರಚಾರದ ಕೊರತೆಯಿಂದಾಗಿ ನಾಟಕ ರಂಗ ಸೊರಗುತ್ತಿರಬಹುದು. ಸಿನೆಮಾ, ಟಿ ವಿ ಯಿಂದಾಗಿ ನಾಟಕ ರಂಗ ತನ್ನ ವೈಭವ ಕಳೆದುಕೊಳ್ಳುತ್ತಿದೆ ಎಂಬುದನ್ನು ಒಪ್ಪಲಾಗುವುದಿಲ್ಲ.

ಎರಡು ವರುಷಗಳ ಹಿಂದೆ ಹಾಸನದಲ್ಲಿ ಅಪರೂಪಕ್ಕೆ ಮೂರು ದಿನಗಳ ನಾಟಕೋತ್ಸವ ನಡೆಯಿತು. ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಅದು ಏರ್ಪಾಡಗಿತ್ತು. ಮೂರು ದಿನ ಮೂರು ಬೇರೆ ಬೇರೆ ನಾಟಕಗಳು ಪ್ರದರ್ಶನಗೊಂಡವು.ಮೂರು ದಿನವೂ ಕಲಾಭವನ ಕಿಕ್ಕಿರಿದಿತ್ತು!!! ಈ ಮೂರು ದಿನಗಳಲ್ಲಿ ಒಂದು ದಿನ ಭಾನುವಾರ! ನಾಟಕ ನೋಡಲು ಜನ ಬರುವುದಿಲ್ಲ ಎಂಬುದು ಭ್ರಮೆಯಷ್ಟೆ. ರಂಗಾಯಣದಲ್ಲೂ ಅಷ್ಟೆ. ಮಧ್ಯಾಹ್ನ ಇದ್ದ "ಕೋರ್ಟ್ ಮಾರ್ಷಲ್" ಗೆ ಪ್ರೇಕ್ಷಕರು ಇದ್ದರು. ಒಂದಿಷ್ಟು ಕುರ್ಚಿಗಳು ಮಾತ್ರ ಖಾಲಿ ಇದ್ದವು. ಆದರೆ ಸಂಜೆ ಏಳುವರೆಗೆ ಇದ್ದ "ಗಿರಿಜಾಕೆ ರಂಗೀನ್ ಸಪ್ನೆ" ಗೆ ವನರಂಗ ತುಂಬಿ ಹೋಗಿತ್ತು. ಮಧ್ಯಾಹ್ನದ ವೇಳೆ ಬಹಳಷ್ಟು ಜನಕ್ಕೆ ನಾಟಕ ವೀಕ್ಷಿಸಲು ಅನಾನುಕೂಲ. ಸಂಜೆ ವೇಳೆ ಹಾಗಲ್ಲ.

ನಾಟಕರಂಗದ ಜನಪ್ರಿಯತೆ ಕುಸಿಯುತಿಲ್ಲ. ಆದರೆ ಅವುಗಳ ಪ್ರದರ್ಶನ ಕೇವಲ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ನಾನು ನಾಟಕ ನೋಡಲು ಮೈಸೂರಿಗೆ ಅಥವ ಬೆಂಗಳೂರಿಗೆ ಬರಬೇಕು!!

೨೦೦೮ ಹೋಗುವಾಗ ನನ್ನ ಕೈಗೊಂದು ಡಿಜಿಟಲ್ ಕ್ಯಾಮರ ಕೊಟ್ಟು ಫೊಟೊಗ್ರಫಿ ಹುಚ್ಚನ್ನು ಹತ್ತಿಸಿ ಹೋಗಿದೆ. ಈ ಹುಚ್ಚು ಎಲ್ಲೆಲಿಗೆ ಕರೆದುಕೊಂಡು ಹೋಗುತ್ತೊ ನೋಡಬೇಕು. ಮೊನ್ನೆ ರಂಗಾಯಣದ ಅಂಗಳದಲ್ಲಿ ಕ್ಲಿಕ್ಕಿಸಿದ ಒಂದಿಷ್ಟು ಚಿತ್ರಗಳು flickr ನಲ್ಲಿ ಹಾಕಿದ್ದೇನೆ. ಅದರ ಕೊಂಡಿಯನ್ನು ಇನ್ನೊಂದು ಈ ಮೇಲ್ ನಲ್ಲಿ ಕಳುಹಿಸಿದ್ದೀನಿ.

"ಮೈಸೂರು ಮಲ್ಲಿಗೆ"ಯ ಬಳ್ಳಿ ಚೆನ್ನಾಗಿ ಬೆಳೆಯಲಿ. ಅದರ ಕಂಪನ್ನು ಅನುಭವಿಸುವ ಸುಖ ನಮ್ಮದಾಗಲಿ. ಸಾಗರಕಟ್ಟೆಯಂತಹ ಚಿತ್ರಣಗಳು ಇನ್ನಷ್ಟು ಬರಲಿ.

ನಾನೊಂದು photo blog ಪ್ರಾರಂಭಿಸುವ ಯೋಚನೆಯಲ್ಲಿದ್ದೇನೆ. ನನ್ನ ಮಟ್ಟಿಗೆ ಪ್ರಾರಂಭಿಸುವುದು ಸುಲಭ, ಆದರೆ ಅದನ್ನು ಮುಂದುವರಿಸುವುದು ನನ್ನಂತಹ ದಿವ್ಯ ಸೋಮಾರಿಗೆ ಬಹಳ ಕಷ್ಟ. ಈಗಾಗಲೆ ಎರಡು ಬ್ಲಾಗ್ ಗಳು (www.tale-harate.blogspot.com ಮತ್ತು www.olegari.blogspot.com ) ತುಕ್ಕು ಹಿಡಿದು ಕೂತಿವೆ.
ಕ್ಷಮಿಸಿ, ನೇಟ್ ಲೋಕದಲ್ಲಿ ಮೊದಲ ಬಾರಿಗೆ ಸಿಕ್ಕಿದಿರೆಂದು ಬಹಳ ಕೊರೆದು ಬಿಟ್ಟೆ ಅನ್ನಿಸುತ್ತೆ.

ಮತ್ತೆ ಸಿಗೊಣ.

ಇಂತಿ
ಜಾವೀದ್
ಹಾಸನ

ಚರಿತಾ said...

ಅಶೋಕ್ ಸರ್ ಗೆ ನಮಸ್ಕಾರ.
ನಮ್ಮ ಮೈಸೂರಿಗರ ಬ್ಲಾಗ್ ನೋಡಿ ಖುಶಿಗೊಂಡೆ.

’ಬಹುರೂಪಿ’ ಮೊದಲ ಆಕರ್ಷಣೆ ಉಳಿಸಿಕೊಂಡಿಲ್ಲ.ನೀವು ಗಮನಿಸಿದ ಹಾಗೆ ವ್ಯಾಪಾರದ ನೆವ ಕೂಡ ನಾಟಕ ಪ್ರದರ್ಶನಕ್ಕೆ ಉಪಯುಕ್ತವಾಗುವಲ್ಲಿ ಸೋತಿದೆ.ಮೊದಲಿನ ಸಂಭ್ರಮ ಕಾಣೆಯಾಗಿದೆ.ಇದಕ್ಕೆ ನಾಟಕದ ಮಂದಿಯೇ ಜನರನ್ನು ಆಕರ್ಷಿಸುವ ಪರಿಹಾರ ಹುಡುಕಿಕೊಳ್ಳಬೇಕಾಗಿದೆ..! ಮೈಸೂರಿನಲ್ಲಿ ಸದಭಿರುಚಿಯ ವೀಕ್ಷಕರಿಗೇನು ಕೊರತೆಯಿಲ್ಲ.ದುಬಾರಿ ಪ್ರವೇಷ ಶುಲ್ಕದಂತೆಯೇ ಉಚಿತ ಪ್ರವೇಷವೂ ನಾಟಕಕ್ಕೆ ಸರಿಯಾದ ನ್ಯಾಯ ಒದಗಿಸಲಾರವು.

ಈ ಬಾರಿ ನಾನು ನೋಡಿದ ಉತ್ತಮ ನಾಟಕಗಳೆಂದರೆ, ’ಕೋರ್ಟ್ ಮಾರ್ಷಲ್’ ಮತ್ತು ’ಗಿರಿಜಾ ಕೆ ಸಪ್ನೆ’.ಕೆಲವು ಒಳ್ಳೆಯ ಸಿನಿಮಾಗಳೂ ಪ್ರದರ್ಶನಗೊಂಡವು.

ಮೈಸೂರಿನ ಸದಭಿರುಚಿಯ ರಸಿಕರೆಲ್ಲರನ್ನೂ ಒಟ್ಟಿಗೆ ಕಲೆ ಹಾಕುತ್ತಿದ್ದ ’ಬಹುರೂಪಿಯ’ ಸಂಭ್ರಮದ ದಿನಗಳು ಮತ್ತೆ ಕಾಣುವಂತಾಗಲಿ,ನಾಟಕಾಭಿರುಚಿಯ ಗೀಳು ಜನರಲ್ಲಿ ಹುಟ್ಟಲಿ ಎಂಬುದು ಎಲ್ಲರ ಆಶಯ.

ನಿಮ್ಮ ಕಾಳಜಿಗೆ ಧನ್ಯವಾದ.

ಒಲವಿರಲಿ.

Th Editor said...

I just saw this post Ashok.Very good post with photos on last years BAHURUPI.I appreciated it.
Thanks

Ramesh S Perla, Mangalore

Th Editor said...

I just saw this post Ashok.Very good post with photos on last years BAHURUPI.I appreciated it.
Thanks

Ramesh S Perla, Mangalore